ನಾ ಕಂಡಂತೆ ಶಾಸಕ ಹರತಾಳು ಹಾಲಪ್ಪ
ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ,ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಕಾರ್ಯನಿರ್ವಹಿಸುತ್ತಿರುವ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೋರಾಟ, ಜನಸೇವೆ ಮೂಲಕ ಇಡೀ ಕ್ಷೇತ್ರದ ಮನೆ ಮಾತಾಗಿರುವ ರಾಜಕಾರಣಿ.
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರ ಗರಡಿಯಲ್ಲಿ ಬೆಳೆದು ರಾಜಕೀಯ ಪ್ರವೇಶಿಸಿ ಎದುರಾದ ಅನೇಕ ಕಷ್ಟಗಳನ್ನು ಎದುರಿಸಿ ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಜನಾನುರಾಗಿ. ನೇರ ನಡೆ-ನುಡಿಯ ವ್ಯಕ್ತಿತ್ವದ ಹರತಾಳು ಹಾಲಪ್ಪ ತಮ್ಮ ಹತ್ತು ಹಲವು ಚಿಂತನೆ, ಅಭಿವೃದ್ಧಿ ಕಾರ್ಯಗಳೊಂದಿಗೆ ಸೇವೆ ಮುಂದುವರಿಸಿದ್ದಾರೆ.
ಬಡವರು, ನಿರ್ಗತಿಕರು, ದೀನದಲಿತರ ಸೇವೆ ಮಾಡುವ ಯಾವುದೇ ವ್ಯಕ್ತಿಗೆ ಸಮಾಜ ಸೇವೆಯೊಂದಿಗೆ ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ಎಂತಹ ಅಡೆತಡೆಗಳನ್ನಾದರೂ ಮೆಟ್ಟಿ ನಿಂತು ಸಾಧಿಸಬಲ್ಲರು ಎಂಬುದಕ್ಕೆ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹರತಾಳು ಹಾಲಪ್ಪ ಸಾಕ್ಷಿಯಾಗಿದ್ದಾರೆ.
ಅಚ್ಚ ಮಲೆನಾಡು ತುಮರಿ ಭಾಗದ ಹೊಸಕೊಪ್ಪ ಎಂಬ ಗ್ರಾಮದಲ್ಲಿ ಸುಸಂಸ್ಕೃತ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಕೃಷಿ ಕಾಯಕ ಮಾಡುತ್ತಿದ್ದ ಹಿರಿಯನಾಯ್ಕ ಮತ್ತು ಮಂಜಮ್ಮ ಉದರದಲ್ಲಿ ಹೊಸಕೊಪ್ಪ ಹಿರಿಯನಾಯ್ಕ ಹಾಲಪ್ಪ 07-03-1961ರಲ್ಲಿ ಜನಿಸಿದರು. ನಾಲ್ಕು ಜನ ಸಹೋದರರು ಸಹೋದರಿಯರ ತುಂಬು ಕುಟುಂಬದಲ್ಲಿ ಕೊನೆಯ ಪುತ್ರರಾದ ಹಾಲಪ್ಪ ಬಾಲ್ಯದಿಂದಲೂ ಅತ್ಯಂತ ಚುರುಕು.
ಸೊರಬ ತಾಲೂಕಿನ ಪಡವಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ ಇಲ್ಲಿಯೇ 7ನೇ ತರಗತಿ ಉತೀರ್ಣರಾದರು. ನಂತರ ಸಾಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಬಳಿಕ ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಪ್ರವೇಶ ಪಡೆದರು.ನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದರು.
ಶಾಲಾ - ಕಾಲೇಜುಗಳಲ್ಲಿ ಓದುತ್ತಿದ್ದಾಗಲೇ ಅಲ್ಲಿನ ಅನೇಕ ರಾಜಕೀಯ ಮುಖಂಡರ ಹೋರಾಟದ ಬದುಕು ಇವರಲ್ಲಿರುವ ಸೇವೆ ಹಾಗೂ ಹೋರಾಟದ ಮನೋಭಾವವನ್ನು ಬಡಿದೆಬ್ಬಿಸಿತು. ಆ ಕಿರಿ ವಯಸ್ಸಿನಲ್ಲಿಯೇ ಸಂಘಟನೆಯಲ್ಲಿ ವಿಭಿನ್ನ ಛಾಪು ಮೂಡಿಸಿದ್ದರು.
ಆ ಸಮಯದ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರ ಸಮಾಜವಾದಿ ಚಿಂತನೆ, ಆದರ್ಶ ಹೋರಾಟಗಳು ಹಾಲಪ್ಪ ರವರ ಸಂಘಟನೆ, ಹೋರಾಟಗಳಿಗೆ ಮಾರ್ಗದರ್ಶಿ ಮತ್ತು ಪ್ರೇರಣೆಯಾಗಿದ್ದವು.
ಪ್ರಾಥಮಿಕ ವಿದ್ಯಾಭ್ಯಾಸದ ದಿನಗಳಿಂದಲೇ ಆದರ್ಶ ಗುಣಗಳ ಜೊತೆಗೆ ಸಮಾಜಸೇವೆ ಹೋರಾಟದಂತಹ ಕ್ರಾಂತಿಕಾರಿ ಮನೋಭಾವನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ನಾನೂ ಕೂಡ ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಜನಸೇವೆ ಮಾಡಬೇಕು ಎಂಬ ತಮ್ಮ ಮನದಾಳದ ಚಿಂತನೆಗೆ ಚಾಲನೆ ನೀಡಿ ರಾಜಕೀಯ ಕ್ಷೇತ್ರದಿಂದ ಜನರ ಹಲವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಲೋಚಿಸಿದರು. ಮೊದಲೇ ವಿದ್ಯಾರ್ಥಿ ಸಂಘಟನೆ, ಚಳುವಳಿಯಲ್ಲಿ ಪಾಲ್ಗೊಂಡಿದ್ದ ಹರತಾಳು ಹಾಲಪ್ಪ ತಮ್ಮ ಸಂಸ್ಕಾರ, ಸಂಸ್ಕೃತಿ, ಚಿಂತನೆಗಳಿಗೆ ಒಪ್ಪುವುದಾದರೆ ಅದು ಬಂಗಾರಪ್ಪರವರ ಗರಡಿಯಲ್ಲಿ ಸಾಧ್ಯ ಎಂದು ತೀರ್ಮಾನಿಸಿದರು.
ನಂತರ ಹರತಾಳು ಹಾಲಪ್ಪ ಹಿಂದಿರುಗಿ ನೋಡಲೇ ಇಲ್ಲ,2004 ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಅವರು ನಂತರ ಕ್ಷೇತ್ರ ಬದಲಿಸಿ 2008 ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ತಮ್ಮ ರಾಜಕೀಯ ಗುರುಗಳ ಇಬ್ಬರು ಮಕ್ಕಳನ್ನು ಸೋಲಿಸಿ ಗೆಲುವಿನ ನಗೆ ಬೀರಿ ಅಂದಿನ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು .2018 ರಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಗೋಡು ತಿಮ್ಮಪ್ಪರವರ ವಿರುದ್ದ ಗೆದ್ದು ಶಾಸಕರಾಗಿ ಆಯ್ಕೆಯಾದರು.
ಒಟ್ಟಾರೆಯಾಗಿ ಹರತಾಳು ಹಾಲಪ್ಪ ಅಂದರೇ ಅಭಿವೃದ್ಧಿಯ ಕೆಲಸ ಅನ್ನುವ ಮಟ್ಟಿಗೆ ಅವರ ಕಾರ್ಯವೈಖರಿ. ಸರ್ಕಾರದ ಕೆಲಸದ ವಿಚಾರದಲ್ಲಿ ಅಧಿಕಾರಿಗಳ ಅಸಡ್ಡೆತನಕ್ಕೆ ಸ್ಥಳದಲ್ಲಿಯೇ ಉತ್ತರಿಸುವ ಹಾಲಪ್ಪ ಹಲವು ಬಾರಿ ತಮ್ಮದೇ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿರುವ ಉದಾಹರಣೆಗಳಿವೆ.
✒✒✒ ರಫ಼ಿ ರಿಪ್ಪನ್ ಪೇಟೆ
No comments: