Header Ads

Breaking News
recent

ರೈತನ ಬವಣೆ

ರೈತನ ಬವಣೆ

ಬಿರುಬಿಸಿಲಿನ ಧಗೆ ಬೇಗೆಗೆ ಬತ್ತಿದ ನೆಲ
ಗುಡುಗು ಮಿಂಚಿನ ಹನಿ ಸಿಂಚನಕ್ಕೆ
ಹದವಾಗಿ ಹಸಿರಿಂದ ಕಂಗೊಳಿಸಲು ಕೃಷಿ
ಕಾಯಕಕ್ಕೆ ಇಳಿವ ಕಾತರದ ಕೃಷಿಕನು 

ಅತಿವೃಷ್ಟಿ, ಅನಾವೃಷ್ಟಿ, ಅಕಾಲ, ಸಕಾಲದ 
ವರ್ಷಧಾರೆಯ ಅವಾಂತರ, ಮಳೆ ಅವಲಂಬಿತ 
ವರುಷದ ಬೇಸಾಯ ಬಳಲಿ ಬಸವಳಿದ 
ಜಿರಾಯಿತನ ಬಾಳಲಿ ಜೂಜಾಡುವ ಮಳೆರಾಯ

ಜಡಿಮಳೆ ಗಾಳಿಯೆನ್ನದೆ ಹೊತ್ತಾರೆಯೆದ್ದು 
ಜೋಡೆತ್ತುಗಳ ಹೆಗಲಿಗೆ ಜೊತ್ತಿಗೆ ಬಿಗಿದು
ಉತ್ತು ಬಿತ್ತಿ ನಾಟಿ ಮಾಡಿ ಪೋಷಿಸುತ್ತ 
ಭವಿಷ್ಯದ ಕನಸನು ಕಾಣುವ ಅನ್ನದಾತ 

ಪ್ರಕೃತಿ ವಿಕೋಪ ಪ್ರತಿಷ್ಠೆ ಪ್ರತಾಪಗಳ 
ಕತ್ತರಿಯಲ್ಲಿ ಅಡಿಕೆಯಾದ ರೈತ ಕೊಳಕು 
ತಳುಕಿನ ಮೊಸಳೆ ಕಣ್ಣೀರ ಕೋಡಿಯನ್ನು 
ಅರಿತು ಅರಿಯದಂತೆ ನಿತ್ಯ ನಲುಗುವನು.

ಪವನ ಬಿರುಗಾಳಿಯ ಅಕಾಲ ಮಳೆಗೆ 
ಫಲಭರಿತ ಬೆಳೆಗಳು ಮಣ್ಣು ಪಾಲಾಗಲು 
ಬವಣೆಯ ಕೃಷಿಕನು ಕುಸಿವನು ಇಳೆಗೆ 
ಚೇತರಿಸಲು ಸಿಲುಕುವ ಸಾಲಶೂಲದಲಿ 

✒✒✒ - ರಫ಼ಿ ರಿಪ್ಪನ್ ಪೇಟೆ


No comments:

Powered by Blogger.